Super News Daily

ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡದ್ದಕ್ಕೆ ಸುಪ್ರೀಂ ಕೋರ್ಟ್‌ನಿಂದ ಕೇಂದ್ರ ಸರ್ಕಾರಕ್ಕೆ ತರಾಟೆ

ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡದ್ದಕ್ಕೆ ಸುಪ್ರೀಂ ಕೋರ್ಟ್‌ನಿಂದ ಕೇಂದ್ರ ಸರ್ಕಾರಕ್ಕೆ ತರಾಟೆ

ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡದ್ದಕ್ಕೆ ಸುಪ್ರೀಂ ಕೋರ್ಟ್‌ನಿಂದ ಕೇಂದ್ರ ಸರ್ಕಾರಕ್ಕೆ ತರಾಟೆ

ಬ್ಯಾಕ್‌ಲಾಗ್‌ ಹುದ್ದೆ ಭರ್ತಿ:ಅಂಗವಿಕಲ ವ್ಯಕ್ತಿಗಳ ಕಾಯ್ದೆಯ (PWD) ಪರಿಣಾಮಕಾರಿ ಜಾರಿ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಯಲ್ಲಿ ವಿಫಲವಾದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

2009ರಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾದ, ಶೇ 100ರಷ್ಟು ಅಂಧತ್ವ ಹೊಂದಿರುವ ಅಭ್ಯರ್ಥಿಯನ್ನು ಮೂರು ತಿಂಗಳೊಳಗಾಗಿ ಕೆಲಸಕ್ಕೆ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.

1995ರ ಪಿಡಬ್ಲ್ಯುಡಿ ಕಾಯ್ದೆಯ ನಿಬಂಧನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರದ ಕರ್ತವ್ಯಲೋಪ ಎದ್ದು ಕಾಣುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

“ಈ ಪ್ರಕರಣದಲ್ಲಿ ಅಂಗವಿಕಲ ವ್ಯಕ್ತಿಗಳ ಪ್ರಯೋಜನಕ್ಕಾಗಿ ಇರುವ ಕಾನೂನುಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಮೇಲ್ಮನವಿದಾರರು ನಿರ್ಲಕ್ಷ್ಯ ಮಾಡಿದ್ದಾರೆ. 1995ರ ಪಿಡಬ್ಲ್ಯುಡಿ ಕಾಯ್ದೆಯನ್ನು ನೈಜ ರೂಪದಲ್ಲಿ ಜಾರಿಗೊಳಿಸಿದ್ದರೆ, ಪ್ರತಿವಾದಿ (ಅಂಧ ಅಭ್ಯರ್ಥಿ) ನ್ಯಾಯಕ್ಕಾಗಿ ಅಲೆದಾಡಬೇಕಾಗುತ್ತಿರಲಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿತು.

ಪೂರ್ಣ ಅಂಧತ್ವ ಹೊಂದಿರುವ ಪಂಕಜ್‌ ಕುಮಾರ್‌ ಶ್ರೀವಾಸ್ತವ 2009ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದರು. ಅವರು ಮುಖ್ಯವಾಗಿ ತಮ್ಮ ಆದ್ಯತೆಗಳನ್ನು ಅನುಕ್ರಮವಾಗಿ ಮೊದಲಿಗೆ ಐಎಎಸ್‌, ಐಆರ್‌ಎಸ್‌–ಐಟಿ, ಐಆರ್‌ಪಿಎಸ್‌ ಮತ್ತು ಐಆರ್‌ಎಸ್‌–ಕಸ್ಟಮ್ಸ್ ಮತ್ತು ಎಕ್ಸೈಸ್ಸ್‌ಗೆ ನೀಡಿದ್ದರು. ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆಯಾದರೂ ಅವರಿಗೆ ನೇಮಕಾತಿ ನಿರಾಕರಿಸಲಾಯಿತು.

ಈ ನಿರಾಕರಣೆಯಿಂದ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ಮೊರೆಹೋದರು. CAT, ಶ್ರೀವಾಸ್ತವ ಅವರನ್ನು ನೇಮಕಾತಿಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. CAT ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿತು, ಆದರೆ ಹೈಕೋರ್ಟ್‌ ಕೂಡಾ CAT ತೀರ್ಪನ್ನು ಸಮರ್ಥಿಸಿತು. ನಂತರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ದಾಖಲಿಸಿತು.

“ಜುಲೈ 9 ರಿಂದ ಮೂರು ತಿಂಗಳೊಳಗಾಗಿ ನೇಮಕಾತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತು. ನೇಮಕಗೊಂಡವರು ಬಾಕಿ ವೇತನ ಮತ್ತು ಸೇವಾ ಹಿರಿತನದ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.

ಇವುಗಳನ್ನೂ ಓದಿ:

 

Exit mobile version